Vistara news polling booth: ಬಿಜೆಪಿಗೇ ಬೆಂಗಳೂರು ‘ಉತ್ತರಾಧಿಕಾರ’; ಕಮಲ – ಕೈ ನಡುವೆ ಅಜಗಜಾಂತರ!
Vistara news polling booth: ಬೆಂಗಳೂರಿನಲ್ಲಿರುವ ವಿಸ್ತಾರ ನ್ಯೂಸ್ ಮುಖ್ಯ ಕಚೇರಿಯಲ್ಲಿ ತೆರೆಯಲಾಗಿರುವ ಪೋಲಿಂಗ್ ಬೂತ್ಗೆ ಸಾರ್ವಜನಿಕರು ನಿಗದಿತ ಸಮಯದಲ್ಲಿ ಪೋನ್ ಮಾಡುವ ಮೂಲಕ ತಮ್ಮ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಯಾರಾಗಬೇಕು, ಯಾವ ಪಕ್ಷ ಈ ಬಾರಿ ಗೆಲ್ಲಬೇಕು ಎಂದು ತಿಳಿಸಬಹುದು. ಇಂದು ಬೆಳಗ್ಗೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಪೋಲಿಂಗ್ ನಡೆದಿದ್ದು, ಹೆಚ್ಚಿನ ಜನ ಬಿಜೆಪಿಯನ್ನು ಬೆಂಬಲಿಸಿದ್ದಾರೆ.
ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ವಿಸ್ತಾರ ನ್ಯೂಸ್ (Vistara News) ಮಂಗಳವಾರ (ಮಾ. 12) ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ನಡೆಸಿದ ಪೋಲಿಂಗ್ ಬೂತ್ನಲ್ಲಿ (Vistara news polling booth) ಜನ ಬಿಜೆಪಿಯನ್ನು ಬೆಂಬಲಿಸಿದ್ದಾರೆ. ವಿಸ್ತಾರ ಪೋಲಿಂಗ್ ಬೂತ್ಗೆ ಸಾವಿರಾರು ಕರೆಗಳು ಬಂದಿದ್ದು, ಅವುಗಳಲ್ಲಿ ಒಟ್ಟು 6121 ಕರೆಗಳ ಸ್ವೀಕರಿಸಲಾಗಿದೆ. ಇವರಲ್ಲಿ ಶೇಕಡಾ 81ರಷ್ಟು ಮತಗಳು ಬಿಜೆಪಿ ಪರವಾಗಿ ಚಲಾವಣೆಯಾಗಿದೆ.
ಬೆಂಗಳೂರು ಉತ್ತರದಲ್ಲಿ ಬಿಜೆಪಿ ಅಭ್ಯರ್ಥಿ ಪರವೇ ಹೆಚ್ಚಿನ ಒಲವನ್ನು ಜನರು ತೋರಿದ್ದಾರೆ. ಈಗ ಹಾಲಿ ಸಂಸದರಾಗಿ ಡಿ.ವಿ. ಸದಾನಂದ ಗೌಡ ಅವರು ಇದ್ದಾರೆ. ಇವರನ್ನು ಬದಲು ಮಾಡುವ ಬಗ್ಗೆ ಬಿಜೆಪಿಯಲ್ಲಿ ಚರ್ಚೆಗಳು ನಡೆಯುತ್ತಿವೆ. ಇದರ ಬೆನ್ನಲ್ಲೇ ಡಿವಿಎಸ್ ಸಹ ಚುನಾವಣಾ ರಾಜಕೀಯದಿಂದ ನಿವೃತ್ತಿ ಪಡೆಯುತ್ತಿರುವುದಾಗಿ ಘೋಷಣೆ ಮಾಡಿದ್ದರು. ಆದರೆ, ಈ ಮಧ್ಯೆ ನಡೆದ ಕೆಲವು ರಾಜಕೀಯ ಬದಲಾವಣೆಯಲ್ಲಿ ಅವರು ತಮ್ಮ ಮನಸ್ಸನ್ನು ಬದಲು ಮಾಡಿದ್ದು, ತಾವೂ ಆಕಾಂಕ್ಷಿ ಎಂದು ಹೇಳುತ್ತಿದ್ದಾರೆ. ಈ ಎಲ್ಲ ಗೊಂದಲಗಳ ನಡುವೆ ಮತದಾರ ಮಾತ್ರ ತನ್ನ ನಿರ್ಧಾರವನ್ನು ಅಚಲವಾಗಿ ಇಟ್ಟುಕೊಂಡಿದ್ದು, ಅಭ್ಯರ್ಥಿ ಯಾರೇ ಆಗಲಿ, ನಮ್ಮ ಮತ ಬಿಜೆಪಿಗೆ ಎಂಬ ಉತ್ತರವನ್ನು ನೀಡಿದ್ದಾರೆ.

Comments
Post a Comment