Narendra Modi: ಸಂದೇಶಖಾಲಿಯ ಅಪರಾಧಿಗಳಿಗೆ ಕಠಿಣ ಶಿಕ್ಷೆ ಒದಗಿಸುವುದೇ ಬಿಜೆಪಿಯ ಗುರಿ ಎಂದ ಮೋದಿ
Narendra Modi: ಪಶ್ಚಿಮ ಬಂಗಾಳದ ಸಂದೇಶಖಾಲಿ ಇತ್ತೀಚೆಗೆ ಇಡೀ ದೇಶದ ಗಮನ ಸೆಳೆದಿತ್ತು. ಟಿಎಂಸಿ ನಾಯಕ ಅಲ್ಲಿನ ಮಹಿಳೆಯ ಮೇಲೆ ದೌರ್ಜನ್ಯ ಎಸಗಿದ್ದ. ಇದೀಗ ಈ ವಿಚಾರವನ್ನು ಪ್ರಸ್ತಾವಿಸಿದ ಪ್ರಧಾನಿ ಮೋದಿ ಅವರು ಅಪರಾಧಿಗಳಿಗೆ ಸೂಕ್ತ ಶಿಕ್ಷೆ ನೀಡಿವುದಾಗಿ ಭರವಸೆ ಒದಗಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಅನ್ಯಾಯವನ್ನು ತಡೆಯಲು ಬಿಜೆಪಿಗೆ ಮಾತ್ರ ಸಾಧ್ಯ. ಇದಕ್ಕಾಗಿ ತಮ್ಮನ್ನು ಬೆಂಬಲಿಸಬೇಕು ಎಂದು ಅವರು ಕೂಚ್ ಬೆಹಾರ್ನಲ್ಲಿ ನಡೆದ ಸಭೆಯಲ್ಲಿ ಮನವಿ ಮಾಡಿದರು.
ಕೋಲ್ಕತ್ತಾ: ದೇಶದಲ್ಲಿ ಲೋಕಸಭಾ ಚುನಾವಣೆ (Lok Sabha Election 2024)ಯ ಕಾವು ಏರತೊಡಗಿದೆ. ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರದಲ್ಲಿ ತೊಡಗಿಸಿಕೊಂಡಿವೆ. ಜತೆಗೆ ಆರೋಪ-ಪ್ರತ್ಯಾರೋಪಗಳೂ ಜೋರಾಗಿ ಕೇಳಿ ಬರತೊಡಗಿವೆ. ಗುರುವಾರ (ಏಪ್ರಿಲ್ 4) ಬಂಗಾಳದ ಕೂಚ್ ಬೆಹಾರ್ (Coochbehar)ನಲ್ಲಿ ಪ್ರಚಾರ ನಡೆಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ʼʼಸಂದೇಶಖಾಲಿ ಘಟನೆಯ ಅಪರಾಧಿಗಳನ್ನು ರಕ್ಷಿಸಲು ತೃಣಮೂಲ ಕಾಂಗ್ರೆಸ್ ಹೇಗೆ ತನ್ನ ಶಕ್ತಿಯನ್ನು ಚಲಾಯಿಸಿತು ಎಂಬುದನ್ನು ಇಡೀ ದೇಶ ನೋಡಿದೆ. ಆದರೆ ಬಿಜೆಪಿಯು ಮಹಿಳಾ ಸಬಲೀಕರಣದತ್ತ ಗಮನ ಹರಿಸುತ್ತಿದೆ. ಸಂದೇಶಖಾಲಿಯ ಅಪರಾಧಿಗಳು ತಮ್ಮ ಮುಂದಿನ ಜೀವನವನ್ನು ಜೈಲಿನಲ್ಲಿ ಕಳೆಯುತ್ತಾರೆ” ಎಂದು ಮೋದಿ ಭರವಸೆ ನೀಡಿದ್ದಾರೆ.
ʼʼಪಶ್ಚಿಮ ಬಂಗಾಳದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಅನ್ಯಾಯವನ್ನು ತಡೆಯಲು ಬಿಜೆಪಿಗೆ ಮಾತ್ರ ಸಾಧ್ಯ. ಆದ್ದರಿಂದ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯನ್ನು ಬಲಪಡಿಸಬೇಕುʼʼ ಎಂದು ಕರೆ ನೀಡಿದ್ದಾರೆ. “ಟಿಎಂಸಿಯ ದುರಾಡಳಿತದ ಪರಿಣಾಮವಾಗಿ ಸಂದೇಶಖಾಲಿಯಲ್ಲಿ ಮಹಿಳೆಯರು ಶೋಷಣೆಗೆ ಒಳಗಾಗಿದ್ದಾರೆ. ಈ ಅಪರಾಧಿಗಳನ್ನು ಶಿಕ್ಷೆ ನೀಡುವುದಾಗಿ ಬಿಜೆಪಿ ಪ್ರತಿಜ್ಞೆ ಮಾಡಿದೆ” ಎಂದು ಮೋದಿ ತಿಳಿಸಿದ್ದಾರೆ.

Comments
Post a Comment